Home » ರೈತರ ಕಷ್ಟಗಳಿಗಾಗಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ

ರೈತರ ಕಷ್ಟಗಳಿಗಾಗಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ

by manager manager

ರೈತರ ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಕೇಂದ್ರ ಸರಕಾರ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದು, ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅತ್ಯಲ್ಪ ಪ್ರೀಮಿಯಂ ವೆಚ್ಚದಲ್ಲಿ ಬೆಳೆ ವಿಮೆಯನ್ನು ಒದಗಿಸುವ, ವಾರ್ಷಿಕ 8,800 ಕೋಟಿ ರೂ. ವೆಚ್ಚದ ಈ ಬೆಳೆ ವಿಮೆ ಯೋಜನೆಯನ್ನು ಕೇಂದ್ರ ಸರಕಾರ 2016ರ ಜೂನ್ ಜಾರಿ ಮಾಡಿದೆ.

ರೈತರ ಆದಾಯ ಸ್ಥಿರಗೊಳಿಸಲು, ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸಲು ಮತ್ತು ಸಾಲದ ಹರಿವನ್ನು ಕೃಷಿ ವಲಯಕ್ಕೆ ಖಚಿತಪಡಿಸಿಕೊಳ್ಳಲು ಈ ಯೋಜನೆ ಜಾರಿಗೆ ಬಂದಿದೆ.

ಯೋಜನೆಯ ಮುಖ್ಯಾಂಶಗಳು

ಈ ಯೋಜನೆಯಲ್ಲಿ ಪ್ರೀಮಿಯಂ ಅಗ್ಗವಿರುವುದು ವಿಶೇಷ. ಆಹಾರಧಾನ್ಯ ಅಥವಾ ಎಣ್ಣೆಕಾಳು ಬೆಳೆ ಬೆಳೆಯುವ ರೈತರು ಮುಂಗಾರು ಅವಧಿಯಲ್ಲಿ ಒಟ್ಟು ವಿಮಾ ಕಂತಿನ ಶೇ.2ರಷ್ಟನ್ನು, ಹಿಂಗಾರು ಹಂಗಾಮಿನಲ್ಲಾದರೆ ಶೇ.1.5ರಷ್ಟನ್ನು ಪಾವತಿಸಬೇಕು. ತೋಟಗಾರಿಕಾ ಹಾಗೂ ಹತ್ತಿ ಬೆಳೆಗಳಿಗೆ ಶೇ.5ರಷ್ಟು ವಿಮಾ ಕಂತು ನಿಗದಿಪಡಿಸಲಾಗಿದೆ. ವಿಮಾ ಕಂತಿನ ಉಳಿಕೆ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನಾಗಿ ಭರಿಸಲಿವೆ.

pradhan mantri fasal bima yojana for support farmers

ಬೆಳೆ ನಷ್ಟ ಸಂಭವಿಸಿದರೆ ವಿಮೆ ಮಾಡಿಸಿದ ರೈತರಿಗೆ ಸಿಗುವ ಪರಿಹಾರವೇನು..?

ಪ್ರತಿಕೂಲ ಹವಾಮಾನ ಅಥವಾ ಮಳೆಕೊರತೆಯಿಂದ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲವಾದರೆ ಗರಿಷ್ಠ ಶೇ.25ರಷ್ಟು ಬೆಳೆನಷ್ಟ ಪರಿಹಾರ ಪಡೆಯಬಹುದಾಗಿದೆ.

ಈ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ (ಇನಂಡೇಷನ್)ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು. ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಯ ಕಛೇರಿಗಳಿಗೆ 48 ಗಂಟೆಯೊಳಗೆ ಮಾಹಿತಿ ನೀಡಬೇಕು. ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು 48 ಗಂಟೆಗಳೊಳಗಾಗಿ ತಿಳಿಸಿದಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.

ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇ. 25 ರಷ್ಟು ಬೆಳೆ ವಿಮಾ ನಷ್ಟ ಪರಿಹಾರ ನೀಡಲು, ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ. 50 ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ.25 ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುವುದು. ಅಲ್ಲದೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಎರಡು ವಾರದೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ಬೆಳೆ ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸುತ್ತದೆ.

ಅರ್ಜಿ ಸಲ್ಲಿಸುವುದಾದರೂ ಹೇಗೆ..?

ಅರ್ಜಿ ಸಲ್ಲಿಸಲು ವಿಮಾ ಮೊತ್ತವು ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ಬೆಳೆ ಸಾಲ ಪಡೆಯದ ರೈತರು ವಿಮೆ ಕಟ್ಟಲು ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ನಿಗದಿತ ಅರ್ಜಿಗಳೊಂದಿಗೆ ಭೂಮಿ ಹಿಂದಿರಲು ದಾಖಲೆಗಳಾದ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ ಕಾರ್ಡ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಸಂಪರ್ಕಿಸಬೇಕು. ಅಷ್ಟೇ ಅಲ್ಲದೇ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಕೃಷಿ ಅಧಿಕಾರಿಗಳು, ತೋಟಗಾರಿಕೆ ಅಧಿಕಾರಿಗಳು ಹಾಗೂ ಸಮೀಪದ ಯಾವುದೇ ಬ್ಯಾಂಕ್‍ಗಳಿಗೆ ಭೇಟಿ ನೀಡಿ ಯೋಜನೆಯ ಸದುಪಯೋಗ ಪಡೆದುಕೊಳ್ಳುಬೇಕಾಗುತ್ತದೆ.

ವಿಮಾ ಹಣ ನೇರ ರೈತರ ಖಾತೆಗೆ

ಬೆಳೆ ವಿಮಾ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡುವಂತೆ ಸಂರಕ್ಷಣೆ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗಿದೆ. ರೈತರ ಆಧಾರ್ ಸಂಖ್ಯೆ ಮೂಲಕ ಬ್ಯಾಂಕ್ ವಿವರ ಪಡೆಯಲಾಗುತ್ತದೆ. ಪ್ರತಿ ರೈತರ ಜಮೀನಿನ ಬಗ್ಗೆ ಮಾಹಿತಿ ಕಲೆ ಹಾಕುವ ಮೂಲಕ ಪ್ರತಿ ರೈತರಿಗೆ ಯೂನಿಕ್ ಐಡಿ ಸಂಖ್ಯೆ ನೀಡಲಿದ್ದು, ಇದರ ಸಹಾಯದಿಂದ ಬೆಳೆ ನಾಶದಿಂದಾಗಿರುವ ನಷ್ಟದ ಬಗ್ಗೆಯೂ ಸಾಫ್ಟ್ ವೇರ್ ಗೆ ಅಪ್.ಲೋಡ್ ಮಾಡಲಾಗುತ್ತದೆ. ರೈತರ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಮೂಲಕ ವಿಮೆಯ ಬಗ್ಗೆ ಮಾಹಿತಿ ರವಾನೆಯಾಗುತ್ತದೆಯಲ್ಲದೇ ಬೆಳೆ ವಿಮೆ ಪಡೆಯಲೂ ಆನ್ ಲೈನ್’ನಲ್ಲೇ ವ್ಯವಸ್ಥೆ ಮಾಡಲಾಗಿದೆ.

pradhan mantri fasal bima yojana is provide insurance coverage and financial support to the farmers of failure of any of the notified crop as a result of natural calamities, pests & diseases. at supporting sustainable production in agriculture sector by way of providing financial support to farmers suffering crop loss/damage arising out of unforeseen events.

You may also like