![](https://www.kannadaadvisor.com/wp-content/uploads/2019/08/370-article-and-35a-article-diffrence-in-kannada-know-here--700x368.jpg)
ನಿನ್ನೆಯಷ್ಟೇ(ಆಗಸ್ಟ್ 6, 2019) ಜಮ್ಮ ಮತ್ತು ಕಾಶ್ಮೀರ ಪುನಾರಚನೆ ಮಸೂದೆ 2019 ಕ್ಕೆ ರಾಜ್ಯಸಭೆ ಅನುಮೋದನೆ. ಈ ಮಹತ್ತರ ಬೆಳವಣಿಗೆಯಿಂದ ಇನ್ನುಮುಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ವಾಯತ್ತತೆ ಹಕ್ಕುಗಳು ರದ್ದಾಗಲಿವೆ. ಈಗ ಜಮ್ಮು ಕಾಶ್ಮೀರ ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನವಾಗಿದ್ದು, ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನವನ್ನು ಅನುಸರಿಸುತ್ತಿದ್ದ ನಿಯಮಗಳೆಲ್ಲವು ಬದಲಾಗಿವೆ. ಜಮ್ಮು ಕಾಶ್ಮೀರಕ್ಕೆ ಇನ್ನು ಮುಂದೆ ಭಾರತದ ಎಲ್ಲ ರಾಜ್ಯಗಳಿಗು ಸಂವಿಧಾನದಡಿಯಲ್ಲಿ ಇದ್ದ, ಕಾನೂನು, ಹಕ್ಕುಗಳು, ಸವಲತ್ತುಗಳು ಅನ್ವಯವಾಗಲಿವೆ.
ಆದರೆ ನೆನ್ನೆಯ ಬೆಳವಣಿಗೆಯಿಂದ ಇನ್ನೂ ಹಲವರು ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ಬಗ್ಗೆ ಅಂತರ್ಜಾಲದಲ್ಲಿ ಹೆಚ್ಚು ಹುಡುಕಾಟ ನೆಡೆಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಇಲ್ಲಿ ನೀಡಿದ್ದೇವೆ.
ಸಂವಿಧಾನದ 370ನೇ ವಿಧಿ
ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕವಾಗಿ 370ನೇ ವಿಧಿಯನ್ನು 1949 ರಲ್ಲಿ ರೂಪಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ತಾತ್ಕಾಲಿಕವಾಗಿ ವಿಶೇಷ ಸ್ವಾಐತ್ತತೆ ನೀಡಲಾಗುತ್ತಿದೆ’ ಎಂದು ವಿಧಿಯಲ್ಲಿ ತಿಳಿಸಲಾಗಿದೆ. ಈ ವಿಧಿಯ ಪ್ರಮುಖ ಅಂಶಗಳೆಂದರೆ
– J & K ತನ್ನದೇ ಆದ ಪತ್ಯೇಕ ಸಂವಿಧಾನವನ್ನು ಹೊಂದಲು ಈ ವಿಧಿಯು ಅವಕಾಶ ನೀಡುತ್ತದೆ. ಭಾರತ ಸಂವಿಧಾನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಯಾಯಿತಿ ನೀಡುತ್ತದೆ.
– ಕೇಂದ್ರ ಸರ್ಕಾರ ಮತ್ತು ಸಂಸತ್ತಿನ ಅಧಿಕಾರವನ್ನು ಈ ರಾಜ್ಯದಲ್ಲಿ 370ನೇ ವಿಧಿ ಸೀಮಿತಗೊಳಿಸುತ್ತದೆ. ಭದ್ರತೆ, ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕಕ್ಕೆ ಸಂಬಂಧಿಸಿದಂತೆ ಮಾತ್ರ ಭಾರತದ ಸಂಸತ್ತು ಜಮ್ಮು ಮತ್ತು ಕಾಶ್ಮೀರದ ಮೇಲೆ ಕಾನೂನು ರೂಪಿಸಬಹುದು.
– ಕೇಂದ್ರ ಸರ್ಕಾರದ ಇತರ ಯಾವುದೇ ಸಾಂವಿಧಾನಿಕ ಅಧಿಕಾರವನ್ನು ಈ ರಾಜ್ಯದ ಮೇಲೆ ಅನ್ವಯಿಸುವ ಮುನ್ನ, ಜಮ್ಮು ಕಾಶ್ಮೀರ ಸರ್ಕಾರದ ಒಪ್ಪಿಗೆ ಪಡೆಯಬೇಕು. ಇದಕ್ಕೆ ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆಯ ಸಮ್ಮತಿ ಅಗತ್ಯ.
– ರಾಜ್ಯದ ಸಂವಿಧಾನ ರಚನಾ ಸಭೆಯು, ಸಭೆ ಸೇರುವವರೆಗೆ ಮಾತ್ರ ರಾಜ್ಯ ಸರ್ಕಾರಕ್ಕೆ ಸಮ್ಮತಿ ಸೂಚಿಸುವ ಅಧಿಕಾರವಿರುತ್ತದೆ. ಅಧಿಕಾರ ಹಂಚಕೆಯನ್ನು ಜಮ್ಮು ಮತತು ಕಾಶ್ಮೀರದ ಸಂವಿಧಾನ ರಚನಾ ಸಭೆಯು ಅಂತಿಮಗೊಳಿಸಿದ ನಂತರ ಅದರಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶವಿಲ್ಲ.
– ಜಮ್ಮು ಮತ್ತು ಕಾಶ್ಮೀರದ ಸಂವಿಧಾನದ ರಚನಾ ಸಭೆಯ ಶಿಫಾರಸ್ಸಿನ ಆಧಾರದ ಮೇಲೆ ಭಾರತ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಬಹುದು ಎಂದು, 370 ವಿಧಿಯ 3ನೇ ಸೆಕ್ಷನ್ನಲ್ಲಿ ವಿವರಿಸಲಾಗಿದೆ. ಈ ವಿಧಿಯು ಸಿಂಧುತ್ವ ಕಳೆದುಕೊಳ್ಳುತ್ತದೆ ಎಂದು ಘೋಷಿಸುವ ಅಧಿಕಾರವನ್ನು ರಾಷ್ಟ್ರಪತಿಗೆ 3ನೇ ಸೆಕ್ಷನ್ ನೀಡುತ್ತದೆ.
– ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯನ್ನು ‘ಪ್ರಧಾನಿ’ ಎಂದೂ, ರಾಜ್ಯಪಾಲರನ್ನು ‘ಸಾದರ್-ಇ-ರಿಯಾಸತ್ ಎಂದು ಕರೆಯಲಾಗುತ್ತಿತ್ತು.
– ಇನ್ನುಮುಂದೆ ಈ ಎಲ್ಲಾ ವಿಶೇಷ ಅಧಿಕಾರಗಳು ಈ ರಾಜ್ಯಕ್ಕೆ ಇರುವುದಿಲ್ಲ. ಬದಲಾಗಿ ಭಾರತ ಸಂವಿಧಾನವು ಇತರೆ ರಾಜ್ಯಗಳಿಗೆ ಕಲ್ಪಿಸಿರುವ ನಿಯಮಗಳು ಅನ್ವಯವಾಗಲಿವೆ.
35ಎ ವಿಧಿ
1954 ರ ಮೇ 14 ರಂದು ರಾಷ್ಟ್ರಪತಿಗಳ ಆದೇಶದ ಮೂಲಕ 370ನೇ ವಿಧಿಗೆ ಪೂರಕವಾಗಿ ’35 ಎ’ ವಿಧಿಯನ್ನು ಸೇರಿಸಲಾಯಿತು. ಇದನ್ನು ಮೂಲ ಸಂವಿಧಾನದಲ್ಲಿ ಸೇರಿಸಿಲ್ಲ. ಬದಲಿಗೆ ಸಂವಿಧಾನದ ಅನುಬಂಧದಲ್ಲಿ ಪಟ್ಟಿ ಮಾಡಲಾಗಿದೆ. ಈ ವಿಧಿ ಹೇಳುವ ಪ್ರಮುಖ ಅಂಶಗಳು
– ಜಮ್ಮು ಮತ್ತು ಕಾಶ್ಮೀರದ ಶಾಶ್ವತ ನಿವಾಸಿಗಳು ಯಾರು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಇದು ನೀಡುತ್ತದೆ.
– ಶಾಶ್ವತ ನಿವಾಸಿಗಳ ಹಕ್ಕುಗಳನ್ನು ಇದು ನಿರ್ಧರಿಸುತ್ತದೆ. ಈ ಪ್ರಕಾರ ಶಾಶ್ವತ ನಿವಾಸಿಗಳು ಮಾತ್ರ ರಾಜ್ಯದಲ್ಲಿ ಸ್ಥಿರಾಸ್ತಿಯನ್ನು ಖರೀದಿಸಬಹುದು. ಸರ್ಕಾರಿ ನೌಕರಿ ಪಡೆಯಬಹುದು ಮತ್ತು ವ್ಯವಹಾರಗಳನ್ನು ನಡೆಸಬಹುದು.
– ವಿದ್ಯಾರ್ಥಿವೇತನ ಸೇರಿದಂತೆ ಸರ್ಕಾರದ ಯಾವುದೇ ನೆರವನ್ನು ರಾಜ್ಯದ ಶಾಶ್ವತ ನಿವಾಸಿಗಳಿಗೆ ಮಾತ್ರ ಇದು ಸೀಮಿತಗೊಳಿಸುತ್ತದೆ.
ಈ ಮೇಲಿನ ಎರಡು ವಿಧಿಗಳು ಜಮ್ಮು ಕಾಶ್ಮೀರಕ್ಕೆ ಒಂದು ರೀತಿ ಕಾಯಂ ಆದ ತಾತ್ಕಾಲಿಕ ವಿಶೇಷಾಧಿಕಾರವನ್ನು ನೀಡಿತ್ತು.